ಬಿರುವೆರ್ ಕುಡ್ಲ ಸಂಘಟನೆಯಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

ಬಂಟ್ವಾಳ, ಅ.21: ಬಿರುವೆರ್ ಕುಡ್ಲ ಇದರ ಮಹಾ ಸೇವಾ ಯೋಜನೆಯ ಅಂಗವಾಗಿ ಬಂಟ್ವಾಳದ ಭಂಡಾರಿ ಬೆಟ್ಟುವಿನಲ್ಲಿ ಬಡಕುಟುಂಬದ ಲಿಂಗಪ್ಪ ದಂಪತಿಗಳಿಗೆ ಸುಸಜ್ಜಿತ ಮನೆ ನಿರ್ಮಿಸಿದ್ದು,  ಹಸ್ತಾಂತರ ಕಾರ‍್ಯಕ್ರಮ ಬುಧವಾರ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮನೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ನೇತೃತ್ವದಲ್ಲಿ ಸಂಘಟನೆಯ ಯುವಕರು ಮಾದರಿ ಕೆಲಸ ಮಾಡುತ್ತಿದ್ದಾರೆ.
ಯಾವುದೇ ಒಳ್ಳೆಯ ಕೆಲಸ ಮಾಡುವಾಗ ಟೀಕೆ ಸಹಜ. ಅದನ್ನು ಎದುರಿಸಿಕೊಂಡೇ ಇಂದು ಈ ಸಂಘಟನೆ ಈ ಮಟ್ಟಕ್ಕೆ ಬೆಳೆದಿದೆ. ಬಡವರಿಗೆ ಸೇವೆ ಮಾಡುವುದೂ ಕೂಡ ದೇವರ ಪೂಜಾ ಕಾರ‍್ಯ ಎನಿಸಿಕೊಳ್ಳುತ್ತದೆ. ಸರಕಾರ ಮಾಡಬೇಕಾದ ಕೆಲಸ ಬಿರುವೆರ್ ಕುಡ್ಲದಿಂದ ನಡೆದಿದೆ. ಈ ಸಂಘಟನೆ ರಾಜ್ಯ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.

ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸುದರ್ಶನ , ಬಂಟ್ವಾಳ ಶಾಸಕ ರಾಜೇಶ್ ನೈ್ಕ್ , ನ್ಯಾಯವಾದಿ ವಿನಾಯಕ್ ಮತ್ತಿತರರು ಶುಭ ಹಾರೈಸಿದರು. ಬಿರುವೆರ್ ಕುಡ್ಲದ ಮಹಿಳಾ ಘಟಕ ಸಹಿತ ೨೨ ಘಟಕಗಳು ಸಂಯುಕ್ತವಾಗಿ ಸೇರಿ ಈ ಮಹಾ ಸೇವಾ ಯೋಜನೆ ಕಾರ‍್ಯ ಹಮ್ಮಿಕೊಂಡಿದೆ. ಬಂಟ್ವಾಳದಲ್ಲಿ ನಿರ್ಮಿಸಿದ ಮನೆ ೫ನೇಯದ್ದಾಗಿದೆ. ಇದರ ಜತೆಗೆ ಇತರ ೫೦೦ಕ್ಕೂ ಅಧಿಕ ಸಮಾಜಮುಖೀ ಸೇವಾ ಯೋಜನೆ ಮಾಡಿದೆ. ಉದಯ ಪೂಜಾರಿ ನೇತೃತ್ವದಲ್ಲಿ ಪ್ರಧಾನ ಸಂಘಟನೆ ಈಗಾಗಲೇ ಅಂದಾಜು ೨ ಕೋಟಿಗೂ ಮಿಕ್ಕಿಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಆರೋಗ್ಯ ಚಿಕಿತ್ಸೆಗೆ, ವಿಕಲ ಚೇತನರಿಗೆ ಗಾಲಿ ಕುರ್ಚಿ, ಶಿಕ್ಷಣಕ್ಕೆ ಮತ್ತಿತರ ಯೋಜನೆಗೆ ವಿತರಿಸಿದೆ. ಸಂಘಟನೆಯ ಸದಸ್ಯರ, ದಾನಿಗಳ ನೆರವಿನಿಂದ ನಿರಂತರವಾಗಿ ಸಮಾಜದಲ್ಲಿ ಕಳೆದ ೭ ವರ್ಷಗಳಲ್ಲಿಗಳಲ್ಲಿ ಸೇವಾ ನಿರತವಾಗಿದೆ.

ವೇದಿಕೆಯಲ್ಲಿ ಬಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿರುವೆರ್ ಕುಡ್ಲ ಸಂಸ್ಥಾಪಕ ಉದಯ ಪೂಜಾರಿ ಬಳ್ಳಾಗ್ ಬಾಗ್, ಬಿಜೆಪಿ ಮುಂದಾಳು ವಸಂತ ಪೂಜಾರಿ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.
ಬಿರುವೆರ್ ಕುಡ್ಲಕ್ಕೆ ನೆರವು ನೀಡಿದ ವೆಂಕಟೇಶ್ ಹಾಗೂ ಲಕ್ಷ್ಮಣ ಶೆಟ್ಟಿ ಅವರನ್ನು ಗೌರವಿಸಲಾಯಿತು. ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಸಂಘಟನೆಯ ಮುಂದಾಳು ನ್ಯಾಯವಾದಿ ಚಂದ್ರಶೇಖರ್ ನೆರವು ನೀಡಿದವರ ವಿವರ ನೀಡಿದರು. ಲಕ್ಷ್ಮೀಶ್ ಸುವರ್ಣ ಕಾರ‍್ಯಕ್ರಮ ನಿರ್ವಹಿಸಿದರು.

 

Leave a Reply